Total Pageviews

Friday, April 15, 2011

ಸೋಲಿನ ಸೌಂದರ್ಯ

ಸೋಲೆಂಬ ಪದದಿಂದಲೇ ನೂರಾರು ಮೈಲಿ ದೂರ ಓಡಿ ಹೋಗಲು ತುದಿಗಲಾಲಲ್ಲಿ ನಿಂತವರು ನಾವು. ಅಂತಹದರಲ್ಲಿ ಅದರ ಸೌಂದರ್ಯವನ್ನು ಕಾಣಲು ಎಲ್ಲಿದೆ ನಮಗೆ ಸಮಯ ಹಾಗೂ ತಾಳ್ಮೆ.

ನಮಗೇನಿದ್ದರು ಗೆಲುವು ಬೇಕು. ಗೆಲುವನ್ನು ಅಪ್ಪಿಕೊಳ್ಳಲು ಸದಾ ಕಾತರರಾಗಿವರು ನಾವು. ಎಸ್ಟೋ ಸಾರಿ ಅಂತೂ ಅತ್ಯಂತ ಕುರೂಪಿಯದರೂ ಕೂಡ ನಮಗೆ ಗೆಲವೇ ಆತ್ಮೀಯವಾಗುತ್ತೆ. ಗೆಲುವಿನ ಸ್ನೇಹಕ್ಕಾಗಿ ಯಾವುದೇ ತ್ಯಾಗಕ್ಕೂ ಸದಾ ಸಿದ್ಧರು ನಾವು. ಕೆಲವು ಬಾರಿಯಂತು ಮನಃ ಸಾಕ್ಷಿಯನ್ನು ಬಲಿ ಕೊಟ್ಟಾದರೂ, ಸರಿ ಗೆಲುವಿನ ಸಾಮೀಪ್ಯ ಸಂಪಾದಿಸಲು ಹವಣಿಸುತ್ತೇವೆ.

ಗೆಲುವಿನ ಆಕರ್ಷಣೆ ಇಂದು ನಿನ್ನೆಯದಲ್ಲ ಬಿಡಿ. ರಾಜ ಮಹಾರಾಜರ ಕಾಲದಿಂದಲೂ ನಡೆದು ಬಂದಿದೆ.ಇಂದಿಗೂ ಕಾಲ, ಗಾಳಿ ಹಾಗೂ ಮಳೆಯ ಹೊಡೆತ ತಡೆದು ಕೊಂಡು ನಿಂತಿರುವ ಅನೇಕ ಸ್ಮಾರಕಗಳು ಗೆಲುವಿನ ನೆನಪಿಗಾಗಿ ಹೊರತು ಸೋಲಿನ ನೆನಪಿಗಾಗಿ ಅಲ್ಲ. ನಾನಿಲ್ಲಿ ಗೆಲುವು ಕೆಟ್ಟದ್ದು ಎಂದು ಹೇಳ ಹೊರಟಿಲ್ಲ. ಅತಿ ಹೆಚ್ಚಾದ ಗೆಲುವಿನ ವೈಭವಿಕರಣದಲ್ಲಿ ಸೋಲನ್ನು ಹೀನಾಯವಾಗಿ ಕಾಣುವುದು ಬೇಡ.

ನಾನಿಲ್ಲಿ ಬೇಕಂತಲೇ ಸೋಲಿ ಎಂದು ಹೇಳುತಿಲ್ಲ. ಸೋಲಿನ ಭಯದಿಂದ ಜೀವನದಲ್ಲಿ ಯಾವುದಕ್ಕೂ ಹಿಂಜರಿಯದಿರಿ. ಈ ಪ್ರಪಂಚದಲ್ಲಿ ಹುಟ್ಟಿ ಬಂದ ಪ್ರತಿಯೊಂದು ಜೀವವೂ ತನ್ನದೇ ಆದ ಒಂದು ಏಕೈಕ ಉದ್ದೇಶವನ್ನು ಹೊತ್ತು ಬರುತ್ತದೆ. ಆ ಉದ್ದೇಶದ ಸಾಧನೆಯೇ ನೈಜ ಗೆಲವು. ಆ ಉದ್ದೇಶ ಏನೆಂದು ಹೇಗೆ ತಿಳಿಯವುದು ? ಹೊಸ ಮಾರ್ಗಗಳನ್ನು ಪ್ರಯತ್ನಿಸಿದಾಗ ಹಾಗೂ ಸಹಜ ಕೌಶಲ್ಯವನ್ನು ಅರಳಲು ಬಿಟ್ಟಾಗ. ಇಂತಹ ದಾರಿಯಲ್ಲಿ ಸೋಲಿನ ಸಂಭವನೀಯತೆ ಕೂಡ ಹೆಚ್ಚು.

ಸೋಲಿನ ಭಯಕ್ಕೆ ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ವಿಚಿತ್ರ ಗುಣವಿದೆ. ಇದು ಮನುಷ್ಯನ ದೇಹದ ಹಾಗೂ ಮನಸ್ಸಿನ ಸಹಜವಾದ ಪ್ರತಿಕ್ರಿಯೆ. ಇದು ಯಶಸ್ಸನ್ನು ತಂದು ಕೊಟ್ಟರು ಇದು ತಾತ್ಕಾಲಿಕವಾದುದು. ಭಯದ ನೆರಳಿನಲ್ಲಿ ದೊರೆತ ಯಶಸ್ಸು ಬಹು ಬೇಗ ದಣಿವನ್ನು ಕೂಡ ತಂದು ಕೊಡುತ್ತದೆ. ಈ ದಣಿವು ದೇಹ ಹಾಗೂ ಮನಸ್ಸನ್ನು ಮಂಕಾಗಿಸುತ್ತದೆ. ಇಂತಹ ಯಶಸ್ಸು ಫ್ಯೂಸ್ ಆಗುವ ಮೊದಲು ಹೆಚ್ಚು ಬೆಳಕನ್ನು ಕೊಟ್ಟು ಉರಿದು ಹೋಗುವ ವಿದ್ಯುತ್ ಬಲ್ಬಿನಂತೆ.

ಸೋಲಿನ ಭಯ ಬೇಡ. ನೈಜ ಗೆಲುವು ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿದಂತೆ ಕರ್ಮ ಮಾಡುವದರಲ್ಲಿ ಇದೆ ಹೊರತು ಅದರಿಂದಾಗುವ ಸೋಲು-ಗೆಲುವಿನ ಪರಿಣಾಮದಲ್ಲಲ್ಲ.  ಆಂತರಿಕ ಕರೆಗೆ ಓಗೊಟ್ಟು, ಎದೆಯೊಡ್ಡಿ, ಧೈರ್ಯದಿಂದ ಮುನ್ನುಗ್ಗಿ ಪ್ರಾಮಾಣಿಕವಾಗಿ ಮಾಡಿದ ಪ್ರಯತ್ನದ ನಂತರವೂ ಬಂದ ಸೋಲುಗಳನ್ನು ಒಬ್ಬ ಸೈನಿಕ ಯುದ್ಧದಲ್ಲಿ ದೊರೆತ ಪದಕಗಳಂತೆ ಹೆಮ್ಮೆಯಿಂದ ಸ್ವೀಕರಿಸಿ. 

ನಿಮ್ಮ ಸಾಮರ್ಥ್ಯದ ಅತ್ಯುನ್ನತ ನೈಜ ಗೆಲುವು ನಿಮ್ಮದಾಗಲಿ. ಅದಕ್ಕೆ ಬೇಕಾಗುವ ಪ್ರೇರಣೆ ಉಡುಪಿಯ ಶ್ರೀ ಕೃಷ್ಣ ನಮ್ಮೆಲ್ಲರಿಗೂ ಕೊಡಲಿ.